Search This Blog

Sunday, 3 January 2021

ರಾಮಜ್ಜ

ರಾಮಜ್ಜನ ಸರಳ ಮಾತು 
ಕೆಲವರಿಗೆ ಅರ್ಥವಾಗದ್ದು, 
ಹಲವರಿಗೆ ಅನರ್ಥವಾಗದ್ದು
ಸ್ವಾರ್ಥವಿಲ್ಲದ ಸ್ವ ಅರ್ಥದ್ದು!!!

ತಲೆ ಸರಿ ಇರುವವರು ಹೇಳಿದ್ದುಂಟು
ಅವನಿಗೆ ತಲೆ ಸರಿಯಿಲ್ಲವೆಂದು
ರಾಮಜ್ಜ ಕಪ್ಪುಮಸಿಯ ಲೇಖಕ
ಗೋಡೆಯೆಂಬ ಬಿಳಿಹಲಗೆಯ ಮೇಲೆ

ಕವಳ ಸಂಚಿಯ ಒಂದು ಖಾನೆ
ಮಸಿ ಇಂಗಾಳಕ್ಕೇ ಮೀಸಲು
ಬಸ್ ಸ್ಟಾಂಡ್ ಹಿಂಬದಿಯ ಗೋಡೆ
ಇವನ ಹಸ್ತಪ್ರತಿಯ ಸ್ವಸ್ಥಾನ

ಇದ್ದದ್ದು ಇರದು ಇಲ್ಲದ್ದು ಇರಲಾರದ್ದು
ರಾಮಜ್ಜನ ಚರ್ವಿತ ಚರ್ವಣ
ಹೊನ್ನ ಬಚ್ಚಿಟ್ಟರೇನು? ಕನ್ನ ಹಾಕುವರುಂಟು
ನಶ್ವರಕ್ಕೇಕೆ ಇರುವವರ ಚಿಂತೆಯೆಂದು

ಡಬ್ಬದಲ್ಲಿ ಏನೆಸೆದರೂ ಸದ್ದಾಗುವುದು 
ಮನಸ್ಸೆಂಬ ಡಬ್ಬದಲ್ಲಿ ಅಸೂಯೆಯ ಸದ್ದು
ಬೇರೆಯವರ ಸುದ್ದಿ ಬಿದ್ದಷ್ಟೂ
ಹಿಗ್ಗುವ ಮನಸಲಿ ಹೊಸ ಹೊಸ ಸದ್ದು

ಅವನ ಹೆಂಡತಿಗಿಂತ ತನ್ನ ಹೆಂಡತಿ ಚಂದ
ಅವನ ಮನೆ ಹಳೆಯದು, ಮಗನಿಗೆ ವಿದ್ಯೆಯಿಲ್ಲ
ಇವನ ಡಬ್ಬದಲಿ ಸದ್ದಿನ ದಿಂಗಿಣ
ಇವನ ಮಾತು ಕೇಳದ ಮಗಳು ಲೆಕ್ಕಕ್ಕಿಲ್ಲ

ರಾಮಜ್ಜನ ಐಡಿಯಾ ಡಬ್ಬಿ ಸುಣ್ಡಬ್ಬಿಯಂತೆ
ಹೊರಗೆ ಲಕಲಕ ಹೊಳಪಿನ ಸ್ಟೀಲು
ಒಳಗೆ ಕಪ್ಪಾಗಿದೆ ಬಾಂದ್ರಿಯ ವಾಸನೆ
ಸಂಭಾವಿತನ ಮನಸಿನ ಸ್ವಭಾವ

ರಾಮಜ್ಜ ಹೇಳುವುದಿಷ್ಟೇ, ಹಿಗ್ಗಬೇಡ!!
ನಿನ್ನ ನೋಡಿ ಹಿಗ್ಗುವರುಂಟು
ಇರದ ಬದುಕಿನಲ್ಲಿ ಇರಲಾರದ್ದು ಬಂದು
ಷಡ್ವೈರಿಗಳ ಕೇಕೆ ಡಬ್ಬದ ಸದ್ದಿನಲ್ಲಿ


ಎಮ್ಮೋಜಿ

ಮಾತು ಬೆಳ್ಳಿ
ಮೌನ ಬಂಗಾರ
ಈಗ ಮಾತೆಲ್ಲ ಕಡಿಮೆ
ಬರೀ ಸಂದೇಶಗಳು

ಅಕ್ಷರಕ್ಕೀಗ ಕಡಿಮೆ ಬೆಲೆ
ಎಮೋಷನ್ನಿಗೇ ಮಣೆ
ಎಲ್ಲೆಂದರಲ್ಲಿ
ಎಮೋಜಿಗಳದ್ದೇ ದರಬಾರು

ನಗು-ಅಳು ಸಿಟ್ಟು-ಪ್ರೀತಿ
ನಾಚಿಕೆ-ಹುಸಿನಗು ಖುಷಿ
ಪೆಚ್ಚುಮೋರೆ ಎಲ್ಲವೂ
ಹಳದಿ ಮುಖವಾಡ ತೊಟ್ಟಿವೆ

ಎಲ್ಲರೂ ಮುಖವಾಡ
ತೊಟ್ಟವರೇ
ಮನಸಿನ ಕನ್ನಡಿ
ತೋರುವುದಿಲ್ಲ

ಒಬ್ಬನ ಹಳದಿ ಮುಖ
ಮತ್ತೊಬ್ಬನಿಗೂ ಹಳದಿಮಯ
ಮಾತು ಮಾಯವಾಗಿ
ಲೋಕಕ್ಕೆಲ್ಲಾ ಕಾಮಾಲೆ

ಒಬ್ಬ ಹಲ್ಲು ತೋರಿ
ನಗುವವ
ಮತ್ತೊಬ್ಬ ಹಲ್ಲುಬ್ಬಿ
ಕೈ ಮುಚ್ಚಿ ನಗುವವ

ಅಳುವವರದೂ
ತರಹೇವಾರಿ
ಕಣ್ಣೀರಿನ ಹೊಳೆ ಹಲವರದು
ಕೆಲವರದು ಒಕ್ಕಣ್ಣಿನ ದುಃಖ

ಹಳೆಯ ಮಾತಿತ್ತು
ಕಣ್ಣಿದ್ದೂ ಕುರುಡರು
ಕಂಡೂ ತಿಳಿದೂ
ತಪ್ಪು ಮಾಡುವರೆಂದು

ಈಗೆಲ್ಲ ಅಕ್ಷರ
ಕಲಿಯುವ ಹಂಗಿಲ್ಲ
ಕಲಿತವರೂ ಸಹ
ನಿರಕ್ಷರಕುಕ್ಷಿಗಳಂತೆ

-ನಾರಾಯಣ ಗಾಂವ್ಕರ್

ಇಸ್ಪೀಟು

ರಾಜ ರಾಣಿಯರಿಗೆ
ಗುಲಾಮ ಬೇಕೇ ಬೇಕು

ಅವರ ಜಾತಿಯೇ ಆಗಬೇಕು
ವರ್ಣ ಧರ್ಮ ಮೀರುವಂತಿಲ್ಲ

ರಾಜರ ಹರಟೆ
ರಾಣಿಯರ ಪಟ್ಟಂಗ
ಗುಲಾಮರ ಮಾತುಕತೆ
ಆದರೂ ಅದು ಅಡ್ಡವೇ!!

ಮೂರು ಸಂಖ್ಯೆಯ
ಸೀರಿಯಲ್ಲು ಕಲಿತರೆ ಸಾಕು
ವರ್ಣ ಧರ್ಮ ಕಂಪಲ್ಸರಿ
ಆಟ ಗೆಲ್ಲುವುದಕ್ಕೆ

ದಾಡೆ ಪೀಡಕರಿಗೆಲ್ಲ
ಗುಲಾಮನೇ ದೊಡ್ಡವ
ಗಟ್ಟಿ ತುರ್ಪಿದ್ದರೆ
ಆಟಕ್ಕೆ ಹುರುಪು

ಮೇಲ್ಜಾತಿ ಕೆಳಜಾತಿ
ಹಳೆತಲೆಗಳ ಟ್ರಂಪಿನಲ್ಲಿ
ಕಳಾವರ ಎಷ್ಟಿದ್ದರೂ
ಅಷ್ಟಕಷ್ಟೇ!!!

ಎಲ್ಲ ಜಾತಿಯವರ
ಕೂಡಿಸಿ ಗಟ್ಟಿಯಿದ್ದವರು
ಟ್ರಂಪ್ ಆಗುತ್ತಾರೆ
ಆಟ ಅವರದೇ

ಮಕ್ಕಳ ಜೊತೆ
ಮಕ್ಕಳಾಗಿ
ಕತ್ತೆಯಾದರೂ
ಚಿಂತೆಯಿಲ್ಲ

ದೊಡ್ಡತನ 
ತೋರಿದರೆ
ಹೊಡೆತ ತಿನ್ನುವುದು 
ಗ್ಯಾರಂಟಿ!

ಬದುಕಿನ ಆಟಕ್ಕೂ
ಬಹಳ ವ್ಯತ್ಯಾಸವಿಲ್ಲ
ಏನೆಂದರೂ
ಅದೃಷ್ಟ ಬೇಕೇ ಬೇಕು!

-ನಾರಾಯಣ ಗಾಂವ್ಕರ್

ನೀ ಬರುವೆ

ವರ್ಷ ಋತುವಿನ ಪರ್ವ
ಸುತ್ತ ಮಂಜಿನ ಮುಸುಕು
ಚಂದ್ರನಾ ಮೊಗ ಮುಚ್ಚಿರಲು
ಕಾದಿರುವೆ ನೀ ಬರುವೆಯೆಂದು

ಸಂಜೆ ಮಂಜಿನ ತಂಪು
ನಾಸಿಕದಿ ಅಲೆಯಂತೆ
ಉಸಿರಿನಲಿ ಬೆರೆತಿರಲು
ಕಾದಿರುವೆ ನೀ ಬರುವೆಯೆಂದು

ಸುಮಗಂಧ ಉಸಿರಿನಲಿ
ಹಸಿರ ಕಸಿ ಕಂಗಳಲಿ
ಬೆರೆಸಿ ಪ್ರೀತಿಯ ಸಿಹಿಯ
ಕಾದಿರುವೆ ನೀ ಬರುವೆಯೆಂದು

ಮೆಲ್ಲ ಬೀಸುವ ಗಾಳಿ
ಕೊಂಚವೇ ಸುರಿವ ಮಳೆ
ಹಸಿರೆಲೆಯು ತಲೆದೂಗಿರಲು
ಕಾದಿರುವೆ ನೀ ಬರುವೆಯೆಂದು

ಸಂಜೆಯೆದ್ದ ತಾರೆಗಳೂ
ನಿದ್ದೆ ಮಂಪರಿನಲ್ಲಿ
ಒಲವಿನಾ ಕಣ್ಬಿಟ್ಟು ನಾ
ಕಾದಿರುವೆ ನೀ ಬರುವೆಯೆಂದು

ನಿಶೆ ಹರಿದು ಬೆಳಗಾಯ್ತು
ಹರಡಿದ ತಾರೆಗಳ್ ಸರಿದು
ರವಿಯೂ ಒಬ್ಬಂಟಿಯಾಗಲು
ಕಾದಿರುವೆ ನೀ ಬರುವೆಯೆಂದು

ನಿತ್ಯ ಅರಳುವ ಕುಸುಮ
ಸಂಜೆಯಲಿ ಬಾಡುತಿದೆ
ಕಾವ್ಯ ಚಿರನೂತನವೆನುತ
ಕಾದಿರುವೆ ನೀ ಬರುವೆಯೆಂದು

Saturday, 4 April 2020

ಅವಳ ನೆನಪು

ಹೊತ್ತು ಮುಸ್ಸಂಜೆಯಲಿ
ಮುತ್ತು ಮಳೆಹನಿಯಂತೆ
ಮತ್ತೆ ಹರಡಿದೆ ಸುತ್ತ
ಅವಳ  ನೆನಪು

ಕತ್ತಲಾಗುವ ಮುನ್ನ
ಚಿ‌ತ್ತಕಾಗಿದೆ ನಿಶೆಯು
ಹೊತ್ತು ಗೊತ್ತೆಂಬುದಿಲ್ಲ
ಅವಳ ನೆನಪು

ಅಂಗಳದ ತೋಟದಲಿ
ಸಪ್ತ ಸ್ವರ ಹೊಮ್ಮುತಿದೆ
ಸುಮ ಭ್ರಮರದಾಟದಲಿ
ಅವಳ ನೆನಪು

ಶರದ ಋತುವಿನ ಶೀತ
ಕರವ ತಂಪಾಗಿಸಲು
ಬಿಸಿಯುಸಿರು ಬೇಕಿನಿಸೆ
ಅವಳ ನೆನಪು

ಭಾನು ಬಾನಂಚಲ್ಲಿ
ಭುವಿಗೆ ಮುತ್ತಿಕ್ಕುತ್ತಿರೆ
ನಾಚಿಕೆಯ ಕುರುಹಲ್ಲಿ
ಅವಳ ನೆನಪು

ವಸುಮತಿಯೆ ನಾಳೆ ನಾ
ಹೊನ್ನ ವಸನವ ತರುವೆ
ತರಣಿ ಧರೆಗಿತ್ತ ವಚನ
ಅವಳ ನೆನಪು

ಪೂರ್ಣಿಮೆಯ ಶಶಿ ತಾನು
ಪೂರ್ಣರೂಪವ ಪಡೆಯೆ
ತಾರೆಯರ ಸರಸದಲಿ
ಅವಳ ನೆನಪು

ನೆನಪಿನಲೆ ತೂಕಡಿಸಿ
ನೆನಪಿರದೆ ಒರಗಿದೆನು
ಅವಳ ಕನಸಿಗೆ ನೆಪವು
ಅವಳ ನೆನಪು

ಬೇಗ ಬೆಳಗಾಗದಿರ-
ಲೆಂದು ಮುಲುಗಿದೆನು
ನೆನಪಿಗಂ ಮೇಲಿಹುದು
ಅವಳಿರುವ ಕನಸು

-ನಾರಾಯಣ ಗಾಂವ್ಕರ್

ಬಾಲೆಗೊಂದು ಸಾಲು

ಏನೋ ಹಳೆಯ ನೆನಪು
ಕಪ್ಪುಬಿಳುಪಿನ ಚಿ‌ತ್ರ
ಬೆಳದಿಂಗಳ ಬಾಲೆಯಲ್ಲ ಈಕೆ
ಕನ್ನಡಕದ ಬಾಲೆಯಂತೆ!

ಹುಣ್ಣಿಮೆ ಚಂದಿರನಿಗೆ
ಕಪ್ಪು ಕನ್ನಡಕ ಹಾಕಿದಂತೆ
ಬಿಡುಗೂದಲ ಮುಸುಕು
ಕರಿ ಮೋಡದಂತೆ

ನಾನು ಹಲುಬುತ್ತೇನೆ,
ಕನ್ನಡಕ ಹಾಗೇ ಇರಲಿ
ಹೊಳಪಿನ ಕಂಗಳಿಗೆ
ದೃಷ್ಟಿಯಾಗದಂತೆ

ಬಿಳಿ ಮೊಗ  ಕಪ್ಪು ಕಂಗಳು
ಕಡುಗಪ್ಪು ಗುಂಗುರು
ನೋಡಿದರೆ ನಿನ್ನ ಪಟ
ಕಪ್ಪು ಬಿಳುಪಿನಂತೆ!

ನಿನ್ನ ಬಣ್ಣವೇ ಹಾಗೆ
ಕಣ್ಣು ಕುಕ್ಕುವುದಿಲ್ಲ
ಸಣ್ಣ ಮುಗುಳುನಗೆ
ಮೊಗಕೆ ಸಿಂಗಾರದಂತೆ

ಕನ್ನಡಕವ ತೆಗೆಯಬೇಡ
ಕಣ್ಣೋಟ ಬೆರೆತರೆ
ಕುರುಡನಾದೇನು
ಬೇರೇನೂ ಕಾಣದಂತೆ!!

Wednesday, 4 September 2019

ನೆರೆಯ ನಂತರ?!!

ನಾಗರನಂತೆ ಬಳುಕುತ್ತ
ಸುಳಿ ಹೊಕ್ಕುಳ ತೋರುತ್ತ
ಸಾಗರನತ್ತ ಮೆತ್ತಗೆ
ಓಡುತ್ತಿದ್ದಳು ಗಂಗಾವಳಿ

ನಾಗರ ಪಂಚಮಿಯಂದು
ಕೆಂಪಾದಳು, ಉಕ್ಕಿದಳು
ಹಸಿದ ನಾಗರನಂತೆ ಸೊಕ್ಕಿ
ಹಸಿರ ನುಂಗಿ ಅಗಲವಾದಳು

ಪರ್ವತನ ವರಿಸಿ ಆವರಿಸಿದಳು
ಜಲದ ಹಾರ ಹಾಕಿ ನೇವರಿಸಿದಳು
ರೌದ್ರ ಪ್ರೇಮ ನಿವೇದನೆಯಲ್ಲಿ
ತನ್ನೊಡಲ ಮಕ್ಕಳ ಮರೆತಳು!

ಜನ ದನ ಮನೆ ವನವೆನ್ನದೇ
ಸಕಲವೂ ಜಲದಿಗ್ಬಂಧನದಲ್ಲಿ
ಹಳೆಯ ಜುಳು ಜುಳು ನಾದವಿಲ್ಲ
ಸೊಕ್ಕಿದ ಹೊಳೆಯ ಮೊರೆತ

ಹರಿವಿಗೆ ಅಡ್ಡಬಂದ ಮರವೋ
ಮನೆಯೋ ಸೇತುವೆಯೋ
ಮುರಿದು ಮುಕ್ಕಿದಳು ತನ್ನ
ಕೈಗೆಟುಕಿದ ಎಲ್ಲವನ್ನೂ

ಮೂರು ಹಗಲು ಎರಡು ರಾತ್ರಿ
ಮನದಣಿಯೆ ಹರಿದಳು
ಮೈಭಾರವ ಇಳಿಸಿದಳೋ
ಹಳೆಯ ಗುರುತುಗಳ ಅಳಿಸಿ

ಹಲವರ ಮನೆ ಮುರಿಯಿತು
ಹಲವರ ಮನ ಕುಸಿಯಿತು
ಹಸಿಯಾಯ್ತು ಮನಮನೆಯೆಲ್ಲಾ
ಹುಸಿಯಾಯ್ತು ಕಡೆದ ಕನಸು

ಅಡಿಕೆ ಮರಗಳು ನೇರ
ಬೆಳೆಯಲು ಹೆದರುತ್ತಿವೆ
ಬಾಗಿದ ಅಡಿಕೆ ಮರಗಳ
ದುಸ್ಥಿತಿಯ ನೋಡಿ

ಹಸಿರುಟ್ಟಿದ್ದ ಭುವಿಯಿಂದು
ಕಡುಗೆಂಪು ಧರೆಯಾಗಿದೆ
ಅಲ್ಲಲ್ಲಿ ಮರಳ ದಿಬ್ಬ
ಹಸನಾದ ನೆಲ ಕೆಸರಾಗಿದೆ

ನಾಗರಗಳು ಮನೆ ಹುಡುಕಿ
ಬಂದಿವೆ ಹಸಿ ಮಣ್ಣ ತಂಪಿಗಾಗಿ
ಅವರ ಮನೆಯೂ ಕದಡಿ
ಮುರಿದು ಹೋಗಿದೆಯೋ ಏನೋ!

ಹಳೆಯ ಬದುಕೇ ಮರಳಿ ಬಾ
ಮನಸು ಮರುಗುವುದು
ಮರಳು ತುಂಬಿದ ತೋಟ ಕಂಡು
ಸುಮ್ಮನೆ ಮಂಜಾಗುವುದು ಕಣ್ಣು

ನಿಸರ್ಗ ಸ್ವರ್ಗವೆಂಬರು,
ಮಳೆ ನಿಸರ್ಗದ ಕೊಡುಗೆಯಂತೆ!
ಆದರೂ ಮಳೆ ಸುರಿಸುರಿದು
ಜನರ ಕೆನ್ನೆ ತೋಯಿಸಿದ್ದೇಕೆ?