Search This Blog

Wednesday, 4 September 2019

ನೆರೆಯ ನಂತರ?!!

ನಾಗರನಂತೆ ಬಳುಕುತ್ತ
ಸುಳಿ ಹೊಕ್ಕುಳ ತೋರುತ್ತ
ಸಾಗರನತ್ತ ಮೆತ್ತಗೆ
ಓಡುತ್ತಿದ್ದಳು ಗಂಗಾವಳಿ

ನಾಗರ ಪಂಚಮಿಯಂದು
ಕೆಂಪಾದಳು, ಉಕ್ಕಿದಳು
ಹಸಿದ ನಾಗರನಂತೆ ಸೊಕ್ಕಿ
ಹಸಿರ ನುಂಗಿ ಅಗಲವಾದಳು

ಪರ್ವತನ ವರಿಸಿ ಆವರಿಸಿದಳು
ಜಲದ ಹಾರ ಹಾಕಿ ನೇವರಿಸಿದಳು
ರೌದ್ರ ಪ್ರೇಮ ನಿವೇದನೆಯಲ್ಲಿ
ತನ್ನೊಡಲ ಮಕ್ಕಳ ಮರೆತಳು!

ಜನ ದನ ಮನೆ ವನವೆನ್ನದೇ
ಸಕಲವೂ ಜಲದಿಗ್ಬಂಧನದಲ್ಲಿ
ಹಳೆಯ ಜುಳು ಜುಳು ನಾದವಿಲ್ಲ
ಸೊಕ್ಕಿದ ಹೊಳೆಯ ಮೊರೆತ

ಹರಿವಿಗೆ ಅಡ್ಡಬಂದ ಮರವೋ
ಮನೆಯೋ ಸೇತುವೆಯೋ
ಮುರಿದು ಮುಕ್ಕಿದಳು ತನ್ನ
ಕೈಗೆಟುಕಿದ ಎಲ್ಲವನ್ನೂ

ಮೂರು ಹಗಲು ಎರಡು ರಾತ್ರಿ
ಮನದಣಿಯೆ ಹರಿದಳು
ಮೈಭಾರವ ಇಳಿಸಿದಳೋ
ಹಳೆಯ ಗುರುತುಗಳ ಅಳಿಸಿ

ಹಲವರ ಮನೆ ಮುರಿಯಿತು
ಹಲವರ ಮನ ಕುಸಿಯಿತು
ಹಸಿಯಾಯ್ತು ಮನಮನೆಯೆಲ್ಲಾ
ಹುಸಿಯಾಯ್ತು ಕಡೆದ ಕನಸು

ಅಡಿಕೆ ಮರಗಳು ನೇರ
ಬೆಳೆಯಲು ಹೆದರುತ್ತಿವೆ
ಬಾಗಿದ ಅಡಿಕೆ ಮರಗಳ
ದುಸ್ಥಿತಿಯ ನೋಡಿ

ಹಸಿರುಟ್ಟಿದ್ದ ಭುವಿಯಿಂದು
ಕಡುಗೆಂಪು ಧರೆಯಾಗಿದೆ
ಅಲ್ಲಲ್ಲಿ ಮರಳ ದಿಬ್ಬ
ಹಸನಾದ ನೆಲ ಕೆಸರಾಗಿದೆ

ನಾಗರಗಳು ಮನೆ ಹುಡುಕಿ
ಬಂದಿವೆ ಹಸಿ ಮಣ್ಣ ತಂಪಿಗಾಗಿ
ಅವರ ಮನೆಯೂ ಕದಡಿ
ಮುರಿದು ಹೋಗಿದೆಯೋ ಏನೋ!

ಹಳೆಯ ಬದುಕೇ ಮರಳಿ ಬಾ
ಮನಸು ಮರುಗುವುದು
ಮರಳು ತುಂಬಿದ ತೋಟ ಕಂಡು
ಸುಮ್ಮನೆ ಮಂಜಾಗುವುದು ಕಣ್ಣು

ನಿಸರ್ಗ ಸ್ವರ್ಗವೆಂಬರು,
ಮಳೆ ನಿಸರ್ಗದ ಕೊಡುಗೆಯಂತೆ!
ಆದರೂ ಮಳೆ ಸುರಿಸುರಿದು
ಜನರ ಕೆನ್ನೆ ತೋಯಿಸಿದ್ದೇಕೆ?