Search This Blog

Monday, 2 February 2015

ಪರಮ-ಪ್ರೇಮ-ಪ್ರಸಂಗ

(ಚಿತ್ರಗೀತೆಗಳಲ್ಲಿ ನನ್ನ ಸ್ವಂತ ಪದಪ್ರಯೋಗ ಮಾಡಿ ಬರೆದ ಲೇಖನ. ಲೇಖನದಲ್ಲಿ ಸಣ್ಣಕತೆಯನ್ನು ಹೊಂದಿಸಿ, ಹಾಸ್ಯವನ್ನು ಹೂರಣ ಮಾಡುವ ಯತ್ನ. ಓದಿ ತಿದ್ದಿ ತಿಳಿಸಿ)

ಅವನು ಪರಮ. ಪರಮೇಶ್ ಅವನ ಹೆಸರಷ್ಟೇ. ಎಲ್ಲಾ ಕಡೆ ಪರಮನೆಂದೆ ಪ್ರಸಿದ್ಧ. ಅದಾಗಲೇ ಎರಡು ವರ್ಷ ಕಾಲೇಜು ಮೆಟ್ಟಿಲು ಸವೆಸಿ, ತನ್ನ ತಲೆಯನ್ನು ಪರೀಕ್ಷೆಯಲ್ಲಿ ಸವೆಸಿಕೊಂಡಿದ್ದ. ಹಾಗೂ ಹೀಗೂ ಪದವಿ ಪ್ರವೇಶ ಪಡೆದು, ಪದವೀಧರನಾಗುವ ಕನಸು ಹೊತ್ತಿದ್ದ ಅವನಲ್ಲಿ ಯಾವ ಧರನಾಗುವ ಲಕ್ಷಣವೂ ಕಾಣುತ್ತಿರಲಿಲ್ಲ. ಅವನ ಸ್ನೇಹಿತರೂ ಯಾರ ವ್ಯಕ್ತಿತ್ವಕ್ಕೂ ಹಿತವರಾಗಿರಲಿಲ್ಲ. ಬೆಳಿಗ್ಗೆ ಕಾಲೇಜು ಮೆಟ್ಟಿಲಲ್ಲಿ ಕುಳಿತು ಬಂದು ಹೋಗುವವರಿಗೆಲ್ಲಾ ತಮ್ಮ ಪದಪ್ರಯೋಗ ಮಾಡುವುದೇ ಆ ತಂಡದ ದಿನಚರಿ. (ಪದಪ್ರಯೋಗ ಹುಡುಗಿಯರಿಗೆ ಅಂತ ಮತ್ತೆ ಹೇಳಬೇಕಾಗಿಲ್ಲವಷ್ಟೆ). ಮುಖ-ಮುಸುಡಿ ಹಿಂದೆ ಮುಂದೆ ನೋಡದೇ ಕಾಡುವುದೇ ಕೆಲಸ ಇವರಿಗೆ, ಹೊತ್ತು ಕಳೆಯಬೇಕಲ್ಲಾ. ಸ್ವಲ್ಪ ಕಲ್ಪಿಸಿಕೊಳ್ಳಿ.

ಯಾರಿವಳು ಯಾರಿವಳು
ರಾಮಭಟ್ಟರ ಮೊಮ್ಮಗಳು
ಶ್ಯಾಮಭಟ್ಟರ ತೋಟದಲ್ಲಿ ಕೊಳೆಅಡಿಕೆ ಹೆಕ್ಕುವಳು
ಮಾತಿನಲಿ ಕೇಳಿದರೆ ಕೈಗೆ ಸಿಗಳು, ಹಾಡುತಾ ನೋಡು ಬರುವಳು ಇವಳು.
ದಯಮಾಡಿ ಬಸ್ ಸ್ಟಾಂಡಲಿ ಸ್ವಲ್ಪ ನೋಡಿ ಎಲ್ಲರೂ
ಸಾಲಾಗಿ ಕಾಲೇಜಿನ ಹುಡುಗರೆಲ್ಲ ನಿಂತರು,
ಸುಂದರಿ ಅಸುರಸುಂದರಿ,
ಈ ಸುಂದರಿಯ ಡ್ರೆಸ್ಸು ನೋಡಲು
ಇವಳ ನೋಡಿ ಹಲ್ಲು ಕಿಸಿಯಲು.
ಎರಡು ದೊಡ್ಡ ಕಣ್ಣಿದೆ, ಅಲ್ಲೆ ಸೊಟ್ಟ ಮೂಗಿದೆ
ಬಬ್ಬಲ್ ಗಮ್ ಒಳಗಿದೆ, ಒಂದು ಹಲ್ಲು ಹೊರಗಿದೆ,
ಏನಿದು ಏನು ಮೋಜಿದು, ಏನಿದೇನು ಮಜವಿದು.
ಯಾರಿವಳು......

ಹೀಗೆ ಪೋಲಿ ಪೋಕರಿಯಾಗಿ ಅಲೆಯುವ ಪರಮನಿಗೆ ಜೀವನದ ನಿಜ ಸಜದ ಬಗ್ಗೆ ಸಹಜವಾಗಿಯೇ ಗೊತ್ತಿಲ್ಲ. ಮತ್ತೊಂದು ವರ್ಷವೂ ಇಂಥ ಆಕರ್ಷಣೆಯಲ್ಲಿ ಮುಗಿದುಹೋಯಿತು. ಆಗ ಕಾಲೇಜಿಗೆ ಬಂದವಳೇ ಚೆಲುವೆ. ಮನಸೋತ ಪರಮ, ಈಗ ಪರಮ-ಪ್ರೇಮಿಯಾದ. ಪ್ರೇಮ ನಿವೇದನೆಯೂ ಆಯಿತು, ಪರಿಣಾಮ ಇವನ ವೇದನೆಯೂ ಹೆಚ್ಚಾಯಿತು. ಏನಾದರಾಗಲಿ ಎಂದು ಆ ಚೆಲುವೆಯ ಅಪ್ಪನೆದುರೇ ವೇದನೆಯ ನಿವೇದನೆಗೆ ಮುಂದಾದ.

ಬೇಡುವೆನು ವಧುವನ್ನು, ಕೊಡು ಮಾವ ಮಗಳನ್ನು,
ಕಡೆತನಕ ಇರ್ತೀವಿ ಜೋಡಿ, ಇಲ್ದಿದ್ರೆ............
ಇಲ್ದಿದ್ರೆ ಹೋಗ್ತೀವಿ ಓಡಿ....

ಹೀಗೆ ಕೇಳಿದರೆ ಯಾರಾದರೂ ಕನ್ಯಾದಾನ ಮಾಡ್ತಾರಾ?  ಈ ವಿಧಾನ ಪರಮನ ಪಾಲಿಗೆ ಯಾವ ಉಪಯೋಗವನ್ನೂ ಮಾಡಲಿಲ್ಲ. ಅವಳಿಗೆ ಮನಸೋತಿದ್ದ ಪರಮ ಕಾಲು ಸುಟ್ಟ ಬೆಕ್ಕಿನಂತೆ ಹುಚ್ಚುಚ್ಚಾಗಿ ತಿರುಗತೊಡಗಿದ. ಇದ್ದ - ಬದ್ದ ಚಟಗಳಿಗೆಲ್ಲಾ ತನ್ನ ತನುವಿನ ಮನೆಯಲ್ಲೇ ಜಾಗ ಕೊಟ್ಟ. ಕುಡಿತ, ಧೂಮಪಾನಗಳೇ ನಿಧಾನವಾಗಿ ದಿನದ ಪ್ರಧಾನವಾಗಿ ಹೋಯಿತು. ಸಾರಾಯಿಯೊಂದಿಗೇ ನಿದ್ದೆ, ಸಿಗರೇಟಿನೊಂದಿಗೇ ಮಾತುಕತೆ.

ನೀನೇ ನೀನೇ ನನಗೆಲ್ಲಾ ನೀನೇ,
ಕೈಯಲ್ಲೂ ನೀನೇ, ಬಾಯಲ್ಲೂ ನೀನೇ
ನನ್ನ ಎದೆಯ ತುಂಬಾ ನಿನ್ನ ಹೊಗೆಯು ತಾನೇ,
ನೀನೆ ಇರದ ಮೇಲೆ ಈ ಜೀವ ಬರಿಬೂದಿ ತಾನೇ,
ಮಳೆಯಾಗಲಿ ಬಿಸಿಲಾಗಲಿ ಚಳಿಯಾಗಲಿ ನಿನ್ನ ಸೇದುವೆ
ಬೆಳಗಾಗಲಿ ಇರುಳಾಗಲಿ ಮರುಳಾಗಿ ನಿನ್ನ ಕೈ ಹಿಡಿಯುವೆ
ನೀನೇ ನನ್ನ ಪ್ರಾಣ ಎಂದು ಜಗವೇ ನೋಡಬೇಕು
ನನ್ನ ನಿನ್ನ ಪ್ರೀತಿ ನೋಡಿ ಎಲ್ರೂ ಹೆದರಬೇಕು..
ನೀನೇ ನೀನೇ ನೀನೇ ನೀನೇ....

ಇವನ ಮನಮನೆಯೆಲ್ಲಾ ಹೊಗೆಯಿಂದ ತುಂಬಿಹೋಯಿತು. ಮನೆ ಮುಂದೆ ಹೊಗೆ ಹಾಕುವುದೊಂದೇ ಬಾಕಿ. ಪರಮನ ಪಿತಪಿತಾಮಹರು, ಪರಸ್ತ್ರೀಯಿಂದ ಇವನಿಗಾದ ಪರಿಸ್ಥಿತಿಯನ್ನು ಕಂಡು ಮರುಗಿದರು. ಪರಮನಿಗೆ ಮದುವೆ ಭಾಗ್ಯ ಬಂದರೆ ಬಾಳಿನಲ್ಲಿ ಸರಿಹೋಗಬಹುದು ಎಂದು ವಿಚಾರ ಮಾಡಿ ಜೀವನದಲ್ಲಿ ಒಂಟಿಯಾಗಿರುವ ಪರಮನನ್ನು ಜಂಟಿಯಾಗಿಸುವ ಕಾರ್ಯಕ್ಕೆ ಮುಂದಾದರು. ಈ ಚಟಚಕ್ರವರ್ತಿಗೆ ಯಾರು ಹೆಣ್ಣು ಕೊಡುತಾರೆ? ಅಂತೂ ಇಂತೂ ಘನಘೋರ ಪ್ರಯತ್ನವನ್ನೇ ಮಾಡಿದ ಪಿತಪಿತಾಮಹರು ಕೃಷ್ಣವೇಣಿಯಾದ ಶೋಧಿಸಿದ ಕೃಷ್ಣೆಯಂತಿರುವ ವಧುವೊಬ್ಬಳನ್ನು ಶೋಧಿಸಿ ವಿವಾಹವನ್ನು ಪೂರೈಸಿದರು. ವಿವಾಹಿತ ಪರಮನ ಅರ್ಧಾಂಗಿಯೇ ಸೇವಂತಿ. ಗಂಡಹೆಂಡಿರ ಜೀವನ ಉಂಡು ಮಲಗುವ ತನಕ.

ಸೇವಂತಿಯೇ ಸೇವಂತಿಯೇ
ಬೆಳಕಿಲ್ಲದಿದ್ರೆ ನೀ ಕಾಣೆಯೇ
ಮಸಿಕೆಂಡಕಿಂಥ ಬಲು ಕಪ್ಪು ನೀನು
ಕರಿಕಾಗೆಗಂತೂ ಸರಿಸಾಟಿ ನೀನು
ಯಾವ ಜನ್ಮದ ಪಾಪವೋ ನನಗೇ ನೀನು ಸಿಕ್ಕಿರುವೆ,
ಸೇವಂತಿಯೇ......

ಹುಟ್ಟು ಶ್ರೀಮಂತ ಪರಮ. ಹೆಂಡತಿಯೋ ವಿಷಯ ಪ್ರಿಯೆ, ಅರ್ಥಪ್ರಿಯೆ. ಹೊಸದೇನೇ ಪೇಟೆಗೆ ಬಂದರೂ ಅದು ತನ್ನ ಮನೆಯನ್ನು ಶೋಭಿಸುವ ಪೇಟವಾಗಬೇಕೆಂಬ ಹಠ ಅವಳದು. ಹೊಸ ಫ್ಯಾಶನ್ ಬಂದರೂ, ಹೋದರು ಅದನ್ನು ಇವಳ ನೋಡಿಯೇ ತಿಳಿಯಬೇಕು. ಸೇವಂತಿ ಮನೆಯಿಂದ ಹೊರಗಿರುವುದೇ ಹೆಚ್ಚಾಯಿತು. ಮನೆ ಮಾರಿ ಮನೆಯಿಂದ ಮಾರು ದೂರ ಹೋಗುವ ಸಮಯ ಬಹಳ ದೂರ ಇರಲಿಲ್ಲ. ಆಗರ್ಭ ಶ್ರೀಮಂತ ಪರಮನಿಗೆ ಅಡುಗೆಮನೆಯೆಂಬ ಮನೆಯ ಗರ್ಭಗುಡಿಯೇ ಮನೆಯಾಯಿತು. ಸಿರಿತನ ಕರಗುತ್ತಿತ್ತು. ಊಟ ಉಪಹಾರ ಮಾಡಿ ಬಡಿಸಲೂ ಜನವಿಲ್ಲ, ಉಪಚಾರಕ್ಕೂ ಯಾರೂ ಗತಿಯಿಲ್ಲ. ಸ್ವಪಾಕ, ಸ್ವಸಹಾಯವೇ ಗತಿಯಾಯ್ತು ಪರಮನಿಗೆ.

ಆಕಾಶವೇ ಬೀಳಲಿ ಮೇಲೆ, ಈ ಸೌಟು ಕೈಬಿಡದು,
ಭೂಮಿಯೆ ಬಾಯ್ಬಿಡಲಿ ಇಲ್ಲೇ, ಅಡುಗೆಮನೆಯು ನನಬಿಡದು,
ನಾನಿರುವುದು ನಳನಾಗಿ, ಅಡುಗೆಮನೆ ನನಗಾಗಿ..
ಬಗೆಬಗೆಯ ಸಿಹಿಕಹಿ ಅಡುಗೆ ನಾನೇ ಮಾಡಿ ಬಡಿಸುವೆ,
ನೀ ಮನೆಗೆ ಬರುವೆ ಎಂದು ಬಾಗಿಲಲ್ಲೆ ಕಾದಿರುವೆ,
ಈ ಮಾತಿಗೆ ಬಾಗಿಲೇ ಸಾಕ್ಷಿ, ನನ್ನ ಪ್ರೀತಿಗೆ ಪಾಯಸ ಸಾಕ್ಷಿ,
ಇನ್ನಾದರು ಮನೆಗೆ ಬಂದು ಅಡುಗೆ ಮಾಡು ಒಲವೇ....

ಪರಮನ ಸಂಸಾರವೂ ಹೋಳಾಯಿತು. ಪರಮನ ದೇಹವೂ ಸಾರಿನಿಂದ ಹೊರತೆಗೆದ ಹಳಸಿದ ಹೋಳಾಯಿತು. ಸೇವಂತಿ ಪರಮನ ಬಾಳಿನಿಂದ ದೂರವಾದಳು. ಬಾಳಿನಲ್ಲಿ ಬಸವಳಿದ ಪರಮನಿಗೆ ಲೋಕವೇ ಬೇಡವಾಗಿ ಹೋಯಿತು. ಬೀದಿ ಬಸವನಂತೆ ಯೌವ್ವನದಲ್ಲಿ ಮೆರೆದ ಪರಮ ವಯಸ್ಸಾದಂತೆ ಬೀದಿ ಪಾಲಾದ, ಬೀದಿ ಎತ್ತಿನಂತಾದ. ಕುಡಿತಕ್ಕೆ ದಾಸನಾದ. ದೇವದಾಸನ ಸ್ವರೂಪನಾದ ಪರಮ ತನ್ನ ಕತೆಯನ್ನು ಎಲ್ಲರಿಗೂ ಪವಿತ್ರ ಪ್ರೇಮಗೀತೆಯ ರೂಪದಲ್ಲಿ ತನ್ನ ಚರಮಗೀತೆ ಕೇಳುವವರೆಗೂ ಹಾಡಿದ. ಬಾರಿನಲ್ಲಿ ಕೂತು ಉಚಿತ ಸಲಹೆಯೋ, ಉಚಿತ ಮನೋರಂಜನೆಯೋ ಎಂಬಂತೆ ಎಲ್ಲರೆದುರು ಹಾಡಿದ, ಅದು ಕುಡಿತದ ಅಮಲೋ ಅಥವಾ ಜೀವನ ಕಲಿಸಿದ ಪಾಠವೋ ಎಂಬುದು ಮಾತ್ರ ಯಾರಿಗೂ ಅರ್ಥವಾಗಲಿಲ್ಲ.

ಬಾರಿರಿರುವುದೆ ನಮಗಾಗಿ
ಬೀಯರಿರುವುದೆ ನಿಮಗಾಗಿ,
ವಿಸ್ಕಿ ಬೇಕೇ, ರಮ್ಮೇ ಸಾಕೇ,
ಕುಡಿದು ಎಲ್ಲರೂ ಟೈಟಾಗಿ,, ಎಲ್ರೂ ಕುಡಿದು ತೂರಾಡಿ..
ಬಾರಿರುವುದೇ......

ಅದು ಅವನಿಗಾಗಿಯೇ ಕಟ್ಟಿದ ಬಾರ್ ಆಗಿತ್ತೇನೋ. ಅವನ ಸಾವನ್ನು ನೋಡಲೆಂದೇ ಕಟ್ಟಿದ ಬಾರ್ ಆಗಿತ್ತೋ ಏನೋ. ಬಾರ್ ಯಜಮಾನ ನಗರಸಭೆಗೆ ದೂರವಾಣಿ ಕರೆ ಮಾಡಿ ಅನಾಥ ಶವವನ್ನು ಸಾಗಿಸಲು ಅನುವಾದ.

ಇತಿ ಪರಮಂ ಪ್ರೇಮಂ ಪ್ರಸಂಗಂ ಸಂಪೂರ್ಣಂ.