Search This Blog

Thursday, 6 August 2015

ನಿನದೇ ನೆನಪು ದಿನವೂ ಮನದಲ್ಲಿ....


ಮಳೆಗಾಲದ ತಂಪಾದ ಸಂಜೆ. ಜೋರು ಮಳೆಯ ನಡುವೆ ಸುಮ್ಮನೆ ರೇಡಿಯೋ ಕಿವಿಯನ್ನು ತಿರುವಿದೆ. ರೇಡಿಯೋ ಹಾಕಿದಾಕ್ಷಣ ಕೇಳಿದ ಧ್ವನಿ ಪಿ.ಬಿ. ಶ್ರೀನಿವಾಸ್ ಅವರದು. ಆ ಕಂಚಿನ ಕಂಠದಿಂದ ಹೊರಹೊಮ್ಮಿದ ಪ್ರತಿ ಸಾಲೂ ಹೃದಯದ ಕದ ತಟ್ಟಿತು. ಮನಸಿನ ಪ್ರತಿ ಪುಟದಲ್ಲೂ ಹಿನ್ನೆಲೆಯಾಗಿ ನಿಂತಿರುವ ನಿನ್ನ ಸಣ್ಣ ಚಿತ್ರವೊಂದು ಸ್ಪಷ್ಟವಾಗುತ್ತಾ ಹೋಯಿತು. ನೆನಪಿನ ಈ ಹಾಡು ಹಳೆಯ ಕನಸಿನ ಅರ್ಥವನ್ನು ಹುಡುಕತೊಡಗಿತು. ತನಗರಿವಿಲ್ಲದಂತೆ ತುಟಿಗಳು ಆ ಸಾಲುಗಳನ್ನು ಪದೇ ಪದೇ ಗುನುಗತೊಡಗಿದವು. ಮನಸ್ಸು ಅದಕ್ಕೆ ಉತ್ತೇಜನ ನೀಡಿತು. ಹಾಡಿನ ಪ್ರತಿ ಸಾಲು ನೀನು ಕೇಳಿದರೆ ಎಷ್ಟು ಚಂದ ಎಂದು ಮನ ತೊದಲತೊಡಗಿತು. ಹೃದಯ ಕಲ್ಪನೆಗೆ ಮೊರೆಹೋಯಿತು. ವಾಸ್ತವತೆಗೆ ಅತಿ ಹತ್ತಿರದ ಕಾಲ್ಪನಿಕತೆಯನ್ನು ಹುಟ್ಟುಹಾಕಿತು. ತಕ್ಷಣ ಎಲ್ಲೆಲ್ಲೋ ಹೋಗಿ ಬಂದ ಅನುಭವವಾಗತೊಡಗಿತು. ನೀನು ನನ್ನನ್ನು ವೀಕ್ಷಿಸುತ್ತಿರುವಂತೆ ಭಾಸವಾಗತೊಡಗಿತು. ಕಿವಿಯಲ್ಲೊಂದು ಸಣ್ಣ ಪಿಸುಮಾತೊಂದು ಹಾದುಹೋಯಿತು. ಬೆರಳುಗಳನ್ನು ತೀಡಿ ಮುಂದೆ ಕರೆದಂತಾಯಿತು. ಅದೇಕೋ ಕ್ಷಣದಲ್ಲೇ ವಾಸ್ತವ ಮತ್ತೆ ವಿರಾಜಿಸಿತು. ಕಾಲ್ಪನಿಕ ಲೋಕ ಥಟ್ಟನೆ ಮಾಯವಾಗಿಹೋಯಿತು. ಯಾಕೆ ಈ ಕಣ್ಣಾಮುಚ್ಚಾಲೆ ಆಟ? ನೈಜತೆಯನ್ನೇ ಹೋಲುವ ಇಂಥ ಕಲ್ಪನೆ ಯಾಕಾದರೂ ಬಂತು? ಹೌದು, ಇಂಥದ್ದೊಂದು ಕನಸನ್ನು ನಾ ಕಂಡಿದ್ದೇನೆಯೇ? ಅಂಥ ಘಟನೆಯೊಂದು ನನ್ನ ಬದುಕಲ್ಲಿ ನಡಿದಿದೆಯೇ? ಸಮರ್ಪಕ ಉತ್ತರ ಯಾವಾಗಲೂ ಹೊಳೆದಿಲ್ಲ. ಕೇವಲ ಕನಸುಗಳನ್ನೇ ಕಟ್ಟುತ್ತಾ ಬದುಕುತ್ತಿರುವ ನನಗೆ ನಿನ್ನ ಮನಸ್ಸಿನ ಭಾವ ಅರ್ಥವಾದರೆ ಅದೇ ಉತ್ತರ ನೀಡುವಲ್ಲಿ ಸಫಲವಾದೀತು. ಆದರೆ ನಿನ್ನ ಮನಸ್ಸಿನ ಒಂದು ಭಾಗವನ್ನೂ ಸಹ ಅಥರ್ೈಸಿಕೊಂಡು ಅದಕ್ಕೊಂದು ರೂಪ ಕೊಡುವ ಕೆಲಸ ಒಗಟಾಗಿ ಪರಿಣಮಿಸಿರುವುದೇ ನನಗೆ ಮತ್ತೆ ಮತ್ತೆ ಕಾಡುವ ಈ ಒಂದೇ ಒಂದು ಸಮಸ್ಯೆ. ಉತ್ತರದ ಹುಡುಕಾಟದಲ್ಲಿ ನಿನ್ನ ನೆನಪುಗಳನ್ನು ಕೆದಕಿ ನೋಡೋಣವೇ?

ಅಂದು ನಾನು ನಿನಗೆ ಕೇಳಿದ್ದು ಕೇವಲ ಒಂದೇ ಪ್ರಶ್ನೆ ಅಲ್ಲವೇ? ಆದರೆ ನನಗೆ ನಾನೇ ಕೇಳಿಕೊಂಡ ಪ್ರಶ್ನೆಗಳು ಅಪರಿಮಿತ. ಯಾವುದಕ್ಕೂ ಉತ್ತರವಿಲ್ಲ. ನಿನ್ನ ಉತ್ತರಕ್ಕಾಗಿ ನಾನು ಕಾಯಬೇಕಿತ್ತು. ನಾ ಮಾಡಿದ ಸಣ್ಣ ತಪ್ಪೇನೆಂದರೆ, ನಿನ್ನ ಉತ್ತರವನ್ನು ಕಲ್ಪಿಸಿಕೊಂಡಿದ್ದು. ಆ ಕಲ್ಪನೆ ನಿನ್ನ ಉತ್ತರದ ವಿರುದ್ಧವಾಗಿದ್ದರಿಂದಲೇ, ನನ್ನ ಕಲ್ಪನೆಗಳು ಕೈಗೆಟುಗದ  ಶಶಿಯಂತೆ ಕಾಣುತ್ತಿರುವುದು. ಆ ಕಲ್ಪನೆಯೇ ಕೆಲವೊಮ್ಮೆ ಇಡೀ ದಿಗಂತವನ್ನೇ ತುಂಬಿ ಬೆಳಗಿ, ಮತ್ತೊಮ್ಮೆ ಮಾಯವಾಗಿ ಗಾಢಾಂಧಕಾರವನ್ನು ತುಂಬುತ್ತಿರುವುದು. ನಮ್ಮ ಕಲ್ಪನೆಗೆ ತಕ್ಕಂತೆ ಎಲ್ಲವೂ ಸಾಗಿದರೆ, ಯಾರಿಗೂ ಕೂಡಾ ದುಖಃ ಎನ್ನುವುದೇ ಇರುತ್ತಿರಲಿಲ್ಲ. ನಿಜ, ನನ್ನ ಭ್ರಮೆಯೇ ನಿನ್ನ ವಿಚಾರವೂ ಆಗಬೇಕೆಂದೇನೂ ಇಲ್ಲವಲ್ಲ. ಅದನ್ನು ವಿಮಶರ್ಿಸಿಯೇ ನಾನು ನಿರ್ಣಯಕ್ಕೆ ಬರಬೇಕಿತ್ತು. ಎದುರು ಕಂಡ ಬೆಳಕನ್ನು ಕಂಡು ಮರೆಯಾಗುವವರೆಗೆ ಭ್ರಮಿಸಿ, ಅದು ಮರೆಯಾದ ನಂತರ ಕತ್ತಲೆಯಲ್ಲಿ ತಡಕಾಡಿದಂತಾಯಿತು ನನ್ನ ಪರಿಸ್ಥಿತಿ. ನೀ ಹತ್ತಿರವಿದ್ದಾಗ ನಿರ್ಧರಿಸಬೇಕಾದವಗಳನ್ನು ಕೇವಲ ಕಲ್ಪನೆಗೇ ಕೊನೆಗೊಳಿಸಿ, ನೀ ದೂರ ಹೋದ ಮೇಲೆ ಅದಕ್ಕಾಗಿ ಹಂಬಲಿಸಿದರೆ ತಪ್ಪಾದೀತಲ್ಲವೇ? ಇದು ಕೇವಲ ವ್ಯರ್ಥ ಪ್ರಲಾಪವಾದೀತು. ಸುಪ್ತ ಮನಸ್ಸು, ಜಾಗೃತ ಬುದ್ಧಿಯ ಮಾತು ಕೇಳಲೊಲ್ಲದು. ಮನಸ್ಸು ತನ್ನನ್ನು ತಾನೇ ಸಮಾಧಾನ ಮಾಡಿಕೊಳ್ಳುವ ನೆಪದಲ್ಲಿ ನಿನ್ನನ್ನು ಚಿತ್ತಪಟಲದಿಂದ ತೆಗೆದುಹಾಕುವ ಯೋಚನೆ ಮಾಡುವುದು. ಮತ್ತೆ ಮತ್ತೆ ಆಗದ ಕೆಲಸಕ್ಕೆ ಕೈ ಹಾಕಿ, ಕೈಚೆಲ್ಲುವುದು. ತಿರುಗಿ ಬಾರದ ಸಮಯವನ್ನೂ ಲೆಕ್ಕಿಸದೇ ಮತ್ತೆ ಪ್ರಯತ್ನ ಮಾಡುವುದು. ಫಲ ಗೊತ್ತಿದ್ದರೂ ಪದೇ ಪದೇ ತನ್ನನ್ನು ತಾನೇ ನೋಯಿಸಿಕೊಳ್ಳುವುದು. ಇದೇ ಆಗಿಬಿಟ್ಟಿದೆ ಮನಸಿನ ಕೆಲಸ. ನೀನೆದುರಿಗೆ ನಿಂದ ಆ ಕ್ಷಣದಲ್ಲಿ ಮನಸ್ಸು ತಪ್ಪು ಮಾಡಿತೇ? ಇಲ್ಲವಾದರೆ ಬುದ್ಧಿಗೆ ಮಂಕು ಬಡಿಯಿತೇ? ಮನಸ್ಸಿಗೂ, ಬುದ್ಧಿಗೂ ಜಗಳವಾಗಿದೆಯೇ ವಿನಃ ಫಲಿತಾಂಶ ಹೊರಬಂದಿಲ್ಲ.

ಮಳೆಗಾಲದ ಒಂದು ದಿನ. ನಿನ್ನ ಕೈಯಲ್ಲಿ ಛತ್ರಿ, ಹೆಗಲಿಗೊಂದು ಸಣ್ಣ ಬ್ಯಾಗ್. ಮೊಗ ಕೊಂಚ ಬಾಗಿತ್ತು. ಗೆಳತಿಯ ಜೊತೆ ಹೆಜ್ಜೆ ಹಾಕುತ್ತಿದ್ದೆ. ಅನತಿ ದೂರದಿಂದಲೇ ನನ್ನ ನೋಟ ನಿನ್ನೆಡೆಗೆ ಹರಿದಿತ್ತು. ನಾ ಎದುರಿನಿಂದ ಹತ್ತಿರ ಬರುತ್ತಿದ್ದಂತೆಂಯೇ ನೀನು ಗೆಳತಿಯ ಹಿಂದೆ ನಿಂತುಬಿಟ್ಟೆ. ನನ್ನೊಡನೆ ತುಂಬ ಸಲುಗೆಯಿದ್ದರೂ, ನಿನ್ನ ಮೊಗದಲ್ಲಿ ಸಂಕೋಚ ಎದ್ದು ಕಾಣುತ್ತಿತ್ತು. ನಮ್ಮ ಆತ್ಮೀಯತೆಯು, ಎರಡು ಜೀವನಗಳನ್ನು ಒಂದಾಗಿಸಿದರೆ ಚಂದ ಅಲ್ಲವೇ? ಎಂದು ಎರಡು ದಿನಗಳ ಹಿಂದೆ ನಾನಿಟ್ಟ ಪ್ರಶ್ನೆಗೆ ನಿನ್ನ ಉತ್ತರ ಸಿಗತ್ತದೆ ಎಂಬ ಕಾರತದಲ್ಲಿದ್ದ ನನಗೆ ನಿರಾಶೆ ಕಾದಿತ್ತು. 
ನಾನಾಡಿದ ಮಾತಿಗೆಲ್ಲಾ ನಗುಸಹಿತ ಪ್ರತಿಕ್ರಿಯೆ ನೀಡಿದರೂ ನನಗೆ ಉತ್ತರ ಸಿಗಲಿಲ್ಲ. ಗಡಿಬಿಡಿಯಲ್ಲೇ ಹೊರಡಲನುವಾದ ನಿನ್ನ ಕೋಮಲ ಪಾದಕ್ಕೆ ಬೆಣಚು ಕಲ್ಲೊಂದು ಚುಂಬಿಸಿದ್ದು? ಆ ನಿಜರ್ೀವ ಕಲ್ಲಿಗೂ ನಿನ್ನ ತಡೆದು ನಿಲ್ಲಿಸುವ ಆಸೆಯಾಗಿರಬೇಕು. ನೀ ಅದನ್ನು ಲೆಕ್ಕಿಸಲಿಲ್ಲ. ತಿರುಗಿ ನೋಡಲಿಲ್ಲ. ನಾನು ನಿಂತ ಕಲ್ಲಾದೆ. ದೇಹ ನಿಶ್ಚಲವಾದರೂ ಮನಸ್ಸು ನಿರಂತರ ತೊಯ್ದಾಟಕ್ಕೆ ಎಡೆಯಾಯಿತು. ನನ್ನ ಪ್ರಪಂಚದ ಪರಿಧಿಯೊಳಗೆ ನಿನ್ನನ್ನು ಬಂಧಿಸಿ, ಆ ಪ್ರಪಂಚದ ಒಡೆತನವನ್ನು ನಿನಗೊಪ್ಪಿಸಬೇಕು ಎಂಬ ನನ್ನ ಆಸಗೆ, ನೀನು ನಿನ್ನ ಆಸೆಯನ್ನು ಸೇರಿಸುವ ಅಭಿಲಾಷೆಯನ್ನು ವ್ಯಕ್ತಪಡಿಸಲಿಲ್ಲ. ಕಲ್ಲು ನಿನ್ನ ಚಲನೆಗೆ ವಿರೋಧ ಒಡ್ಡಿತು, ನೀನದನ್ನು ಕಡೆಗಣಿಸಿದೆ. ನಾನು ನಿನ್ನನ್ನು ಕೈಹಿಡಿದು ಮುನ್ನಡೆಸಲು ಬಯಸಿದೆ, ನೀನದನ್ನು ಅನವಶ್ಯಕವೆಂದು ಭಾವಿಸಿದೆ. ನಿನ್ನ ಮೌನ ನಡಿಗೆ ಕಂಡು ಆ ನಿಜರ್ೀವ ಕಲ್ಲು ನನ್ನನ್ನು ಅಣಕಿಸಿದಂತೆ ತೋರಿತು. ವರ್ಷಗಳಿಂದ ಒಡನಾಡಿರುವ ನಾನೂ, ಆ ಅಸ್ತಿತ್ವ ಇರದ ಕಲ್ಲೂ ನಿನಗೆ ಒಂದೇ ಆಗಿಬಿಟ್ಟವಲ್ಲ.

ಅಂದೇ ಕೊನೆ, ನಿನ್ನ ಮಧುರ ಸ್ವರವನ್ನು ನಾ ಕೇಳಿಲ್ಲ. ನೀ ಎಲ್ಲಿ ಕಂಡರೂ ನನ್ನ ಜೊತೆ ಮಾತಾಡುವೆಯೆಂದು ನಿರೀಕ್ಷೆಯಲ್ಲಿ ನಾನಿದ್ದರೆ, ಪರಿಚಯವೇ ಇಲ್ಲವೆಂಬಂತೆ ಮುಖ ತಿರುಗಿಸಿಕೊಂಡು ನಡೆವ ನಿನ್ನ ಭಾವವೇ ನನಗರ್ಥವಾಗುತ್ತಿಲ್ಲ. ನೀ ಬರುವೆ, ಮಾತಾಡುವೆ ಎಂದು ಕರ್ಣಗಳು ನಿನ್ನ ಗೆಜ್ಜೆಸದ್ದಿಗಾಗಿಯೇ ಕಾಯ್ದರೆ, ನಿನ್ನ ಮೋಹಕ ನಯನಗಳನ್ನು ದೃಷ್ಟಿಸುವಾಸೆಯಿಂದ ಕಣ್ಣುಗಳು ಕಾಯಿತ್ತಿವೆ. ಆದರೆ ಈವರೆಗೂ ಕಣ್ಣು-ಕರ್ಣಗಳು ಜೊತೆಗಿದ್ದು ಒಂದಕ್ಕೊಂದು ಸಾಂತ್ವನ ಹೇಳಿಕೊಳ್ಳುತ್ತಲೇ ಇವೆ. ಯಾಕೆ ಹೀಗಾಗಿಹೋಯಿತು?
 ನಿನ್ನ ಸೌಮ್ಯಭಾವ, ತಾಳ್ಮೆಯ ಗುಣ, ಎಲ್ಲರ ಜೊತೆ ನಗುನಗುತ್ತಾ ಮಾತಾಡುವ ಅಹಂಕಾರರಹಿತ ಪರಿ, ಸಹಾಯಕ್ಕೆ ಮುಂದಿಟ್ಟ ಹೆಜ್ಜೆ, ಹೃದಯ ವೈಶಾಲ್ಯತೆ ಇವೆಲ್ಲವೂ ನಿನ್ನೆಡೆಗೆ ನೋಡುವಂತೆ ಮಾಡಿತು. ನನ್ನ ನಿನ್ನ ನಡುವೆ ನಗುವಿನ ವಿನಿಮಯಗಳು, ನಗುವಿನ ಕಡಲನ್ನೇ ಸೂರೆಗೊಳ್ಳಲು ಹಂಬಲಿಸುವಂತೆ ಮಾಡಿತು. ಒಬ್ಬರನ್ನೊಬ್ಬರು ನೋಡಿದಾಗಲೆಲ್ಲ ನಿನ್ನ ಕಣ್ಣುಗಳು ನನ್ನ ಕಣ್ಣುಗಳಿಗೆ ಸ್ಪಧರ್ಿಸಿದ ರೀತಿ ನನ್ನನ್ನು ಮರುಳು ಮಾಡಿಬಿಟ್ಟಿತು. ಆದರೆ ನನ್ನ ಭಾವನೆಗಳನ್ನು ನಿನಗೆ ಹೇಳಿದ್ದೇ ತಪ್ಪಾಯಿತೇ? ಅಥವಾ ಅದನ್ನು ನೀನು ಅರ್ಥ ಮಾಡಿಕೊಂಡ ರೀತಿಯೇ ತಪ್ಪಾಯಿತೇ? ಗೊತ್ತಿಲ್ಲ.

ನಾನು ಕಾಯುತ್ತಿರುವೆ. ನೀನು ಒಂದಿಲ್ಲೊಂದು ದಿನ ಬರುವೆ. ಕಗ್ಗತ್ತಲೆಯ ಕಾಡಿನಲ್ಲಿ ದಾರಿತಪ್ಪಿ ತಿರುಗುತ್ತಿರುವವನಿಗೆ ದೂರದಲ್ಲಿ ಕಂಡ ಮಿಣುಕು ದೀಪದಂತೆ, ಆ ದೀಪವು ಹತ್ತಿರ ಸಾಗಿ ಬಂದು ದಾರಿ ತೋರಿದಂತೆ, ನೀರಿನ ಸುಳಿಯಲ್ಲಿ ಬಿದ್ದು ಈಜು ಬಾರದವನಿಗೆ ತೇಲಿಬಂದ ಮರದ ಸಣ್ಣ ದಿಮ್ಮಿಯಂತೆ, ಹಾಡಿನ ರಾಗ ಮರೆತು ಚಡಪಡಿಸುವವನಿಗೆ ಬದಿಯ ವಾದ್ಯವೊಂದು ಶೃತಿ ಸೇರಿಸಿದಂತೆ, ಹಸಿವೆಯಿಂದ ಕಂಗೆಟ್ಟ ಬಡ ಪರದೇಸಿಗೆ ದೇವರ ಪ್ರಸಾದ ಸಿಕ್ಕಿದಂತೆ - ನನ್ನ ಅಂತಿಮ ನಿರೀಕ್ಷೆಯ ಕ್ಷಣದಲ್ಲಾದರೂ ನೀ ಬರುವೆ, ನನ್ನ ಮುಂದೆ ಕೈ ಚಾಚುವೆ, ನನ್ನ ಎದೆಗೆ ಒರಗಿ ಹೃದಯ ಬಡಿತ ಕೇಳುವೆ, ನನ್ನ ಕಣ್ಣಿನಲ್ಲೊಂದು ಮಿಂಚು ಹಾದುಹೋಗುವುದನ್ನು ಕಾಣುವ ಆಸೆಯನ್ನು ನೀನು ಪಡೆಯುವೆ ಎಂಬ ಕಲ್ಪನೆಯೇ ಹೆಚ್ಚು ಹೆಚ್ಚು ಬರುತ್ತಿದೆ. ಅದೇ ಕಾಯಿಸುತ್ತದೆ. ನೆನಪುಗಳನ್ನು ಕೆದಕಿ ಮಸುಕಾಗದಂತೆ ಕಾಯುತ್ತಿದೆ. ಅದೇ ಕಾರಣ ಆ ಕಣ್ಣಾಮುಚ್ಚಾಲೆ ಆಟಕ್ಕೆ. ಆದಕ್ಕಾಗಿಯೇ ಮನ ಹಗಲಿರುಳು ಸಹ ಪುನರಾವತರ್ಿಸುತ್ತಿರುವುದು, ನಿನದೇ ನೆನಪು ದಿನವೂ ಮನದಲ್ಲಿ ಎಂದು.


No comments:

Post a Comment